ವಿ ಸೋಮಣ್ಣ ಅವರು ಈವರೆಗೆ ಹಲವಾರು ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಉಸ್ತುವಾರಿಯಾಗಿ ಮುನ್ನೆಲೆಯಲ್ಲಿ ನಿಂತು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮುಖ್ಯವಾಗಿ ಬೆಂಗಳೂರು ಮಹಾನಗರದಲ್ಲಿ ಸೋಮಣ್ಣ ಅವರಿಗೆ ಅಪಾರ ಪ್ರಭಾವ ಮತ್ತು ಹಿಡಿತ ಇದೆ. ಬಿಬಿಎಂಪಿ ಚುನಾವಣೆಯಲ್ಲಂತೂ ಸೋಮಣ್ಣ ಅವರು ಪಕ್ಷದ ಪ್ರಬಲ ಶಕ್ತಿ.
2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ನಾಯಕ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ಅವರು ಚಾರಿತ್ರಿಕ ಗೆಲುವು ಸಾಧಿಸುವಲ್ಲಿ ಸೋಮಣ್ಣ ಅವರ ರಾಜಕೀಯ ತಂತ್ರಗಾರಿಕೆ ಮತ್ತು ಪಕ್ಷ ಸಂಘಟನೆಯ ಕೊಡುಗೆ ಮಹತ್ವಪೂರ್ಣ.
2019ರಲ್ಲಿ ನಡೆದ ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಸಮರದಲ್ಲಿ ಸೋಮಣ್ಣ ಅವರು ಉಸ್ತುವಾರಿ ವಹಿಸಿದ್ದರು. ಕ್ಷೇತ್ರಾದ್ಯಂತ ವ್ಯಾಪಕ ಪ್ರಚಾರ ನಡೆಸಿದ್ದ ಸೋಮಣ್ಣ ಅವರು ವಿವಿಧ ಸಮುದಾಯಗಳ ಮುಖಂಡರು, ಧಾರ್ಮಿಕ ಪ್ರಮುಖರ ಜತೆ ಸಮನ್ವಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಉಮೇಶ್ ಜಾಧವ್ ಅವರು ಪ್ರಚಂಡ ಜಯ ದಾಖಲಿಸಿದರು.
ಈ ಚುನಾವಣೆ ಸಂದರ್ಭದಲ್ಲಿ ಉಸ್ತುವಾರಿಯ ಹೊಣೆ ಹೊತ್ತು ಕ್ಷೇತ್ರದ ಮೂಲೆಮೂಲೆಗಳಲ್ಲಿ ಸಂಚರಿಸಿ, ವಿವಿಧ ಸಂಘ ಸಂಸ್ಥೆಗಳು, ಸಮುದಾಯ ಸಂಘಟನೆಗಳು ಮತ್ತು ಸ್ಥಳೀಯ ಮುಖಂಡರ ಜತೆ ಸತತ ಸಂವಾದ ನಡೆಸಿ ಮತಗಳ ಧ್ರುವೀಕರಣದಲ್ಲಿ ಸೋಮಣ್ಣ ಅವರು ಮುಖ್ಯ ಪಾತ್ರ ವಹಿಸಿದರು. ಟಿಕೆಟ್ ಗೆ ತೀವ್ರ ಪೈಪೋಟಿ ಮತ್ತು ಬಂಡಾಯ ಅಭ್ಯರ್ಥಿಗಳ ಗೊಂದಲದ ಸವಾಲಿನ ನಡುವೆಯೂ ಪಕ್ಷದ ಅಭ್ಯರ್ಥಿ ಶರಣು ಸಲಗರ ವಿಜಯ ಸಾಧಿಸಿದರು.